
ಸೆಲೆಬ್ರಿಟಿ.
ಪ್ರಸಿದ್ಧರು – ಜನಪ್ರಿಯರು – ಪ್ರಖ್ಯಾತರು – ವಿಖ್ಯಾತರು – ಕುಖ್ಯಾತರು ಮುಂತಾದ ಹೆಸರುಗಳಿಂದ ಕರೆಯುವ ಒಂದು ವರ್ಗ ಅಸ್ತಿತ್ವದಲ್ಲಿದೆ..
ಮಧ್ಯಮ – ಕೆಳ ಮಧ್ಯಮ ಮತ್ತು ಬಡವರೇ ಹೆಚ್ಚು ಇರುವ ಭಾರತದಲ್ಲಿ ಇವರ ಪ್ರಾಮುಖ್ಯತೆ ಹೆಚ್ಚಾಗಿಯೇ ಇದೆ.
ಹಿಂದಿನ ಕಾಲದಲ್ಲಿ ರಾಜ ಮಹಾರಾಜರು, ಅವರ ಪರಿವಾರ, ಬರಹಗಾರರು, ಪಂಡಿತರು ಜಮೀನ್ದಾರರು, ಸಾಧಕರು ಇತ್ಯಾದಿಗಳೇ ಹೆಚ್ಚಾಗಿ ಸೆಲೆಬ್ರಿಟಿ ಪಟ್ಟಿಯಲ್ಲಿ ಇರುತ್ತಿದ್ದರು..
ಮುಂದೆ,
ಸಿನಿಮಾ ನಟನಟಿಯರು, ರಾಜಕಾರಣಿಗಳು, ಶ್ರೀಮಂತ ವ್ಯಾಪಾರೋಧ್ಯಮಿಗಳು, ಕ್ರೀಡಾಪಟುಗಳು, ಮಾಡೆಲ್ ಗಳು, ಹಾಡು ನೃತ್ಯಗಾರರು ಮುಂತಾದವರು ಈ ಪಟ್ಟಿಯಲ್ಲಿ ಸೇರ್ಪಡೆಯಾದರು.
ಈಗ,
ದೃಶ್ಯ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾ ಪ್ರಬಲವಾದಂತೆ ಆ ಸೆಲೆಬ್ರಿಟಿ ಪರಿಕಲ್ಪನೆಯೇ ಬದಲಾಗಿದೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದರೆ ಯಾವುದಾದರೂ ಕ್ಷೇತ್ರದಲ್ಲಿ ಸಾಮಾನ್ಯರು ಮಾಡಲು ಸಾಧ್ಯವಾಗದ ಅಸಾಧ್ಯ ಕೆಲಸವನ್ನೋ ಕಲೆಯನ್ನೋ ತ್ಯಾಗವನ್ನೋ ಮಾಡಿದ ಸಾಧಕರು ಎಂಬ ಅಭಿಪ್ರಾಯವಿತ್ತು. ಅವರ ಬಗ್ಗೆ ಗೌರವ ಮತ್ತು ಅವರನ್ನು ಆದರ್ಶ ಎಂದು ಪರಿಗಣಿಸಲಾಗುತ್ತಿತ್ತು.
ಆದರೆ ಈಗ…….
ಬರೆಯುವಾಗಲೇ ನಗು ಬರುತ್ತಿದೆ..
ಶ್ರಮ – ಸಾಧನೆ – ವ್ಯಕ್ತಿತ್ವ – ಒಳ್ಳೆಯತನಗಳಿಂದ ಸೆಲೆಬ್ರಿಟಿಗಳಾಗುತ್ತಿದ್ದ ಸಾಧಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿ ಅದಕ್ಕೆ ವಿರುದ್ಧ ವ್ಯಕ್ತಿತ್ವದ ಜನರು ಸೆಲೆಬ್ರಿಟಿಗಳು ಎಂದು ಗುರುತಿಸಲ್ಪಡುತ್ತಿರುವುದು ತುಂಬಾ ಅಪಾಯಕಾರಿಯಾಗಿದೆ ಮತ್ತು ಹಾಸ್ಯಾಸ್ಪದವಾಗಿದೆ. ಇಂದಿನ ಮಕ್ಕಳು ಮತ್ತು ಯುವಜನರು ಆ ಉಡಾಫೆ ಸೆಲೆಬ್ರಿಟಿಗಳನ್ನೇ ಆದರ್ಶಗಳೆಂದು ಭಾವಿಸಿದರೆ ತುಂಬಾ ಕಷ್ಟವಾಗುತ್ತದೆ.
ಯಾವುದೋ ಸಿನಿಮಾ ಧಾರಾವಾಹಿಯ ನಟನಟಿಯೋ, ನಿರೂಪಕರೋ, ವಾರ್ತಾವಾಚಕರೋ, ರಾಜಕಾರಣಿಯೋ, ಕ್ರೀಡಾಪಟುವೋ, ಬರಹಗಾರನೋ, ಜ್ಯೋತಿಷಿಯೋ, ಎಲ್ಲಾ ಧರ್ಮಗಳ ಧರ್ಮಾಧಿಕಾರಿ ಭಾಷಣಕಾರನೋ, ಸಂಘಟನಾಕಾರನೋ ಇನ್ಯಾರೋ ಟಿವಿ ಪತ್ರಿಕೆ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಂಡು ಬಹಳ ಜನರನ್ನು ತಲುಪಿ ಅವನನ್ನು ನೋಡಿದ ಜನ ಆತ ಸೆಲೆಬ್ರಿಟಿಯೇ ಇರಬೇಕೆಂದು ಭ್ರಮಿಸಿ ಆತನನ್ನೇ ಗಣ್ಯ ವ್ಯಕ್ತಿ ಎಂದು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ.
ವ್ಯಕ್ತಿತ್ವವೇ ಇಲ್ಲದ ಈ ರೀತಿಯ ಜನ ಸಮಾಜದ ಮುಖ್ಯ ವಾಹಿನಿಗೆ ಬಂದು ತಮ್ಮ ತಿಕ್ಕಲುತನಗಳಿಂದ ಇಡೀ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲೂ ಈ ರೀತಿ ಹಾವಳಿ ಇಡುತ್ತಿರುವ ಹುಚ್ಚರನ್ನು ಉದಾಹರಣೆ ಸಮೇತ ಹೇಳಬಹುದು.
ಆದರೆ ಅದು ವೈಯಕ್ತಿಕ ನಿಂದನೆಯಾಗುತ್ತದೆ.
ಆದ್ದರಿಂದ ನಾವುಗಳೇ ಈ ಸೆಲೆಬ್ರಿಟಿ ಪರಿಕಲ್ಪನೆಯನ್ನು ನಮ್ಮ ಮನಸ್ಸಿನಲ್ಲಿಯೇ ಬದಲಾಯಿಸಿಕೊಂಡು…….
ಯಾವ ವ್ಯಕ್ತಿ ತನ್ನ ಪ್ರತಿಭೆಯಿಂದ, ತ್ಯಾಗದಿಂದ, ಶ್ರಮದಿಂದ, ನಿಸ್ವಾರ್ಥದಿಂದ, ಮಾನವೀಯ ನಿಲುವಿನಿಂದ ಮತ್ತು ತನ್ನ ಇಡೀ ವ್ಯಕ್ತಿತ್ವದಿಂದ ಸಾಮಾನ್ಯಕ್ಕಿಂತ ಮೇಲ್ಮಟ್ಟದ ಸಾಧನೆ ಮಾಡಿ ತನ್ನ ನಡವಳಿಕೆಯಿಂದ ಅನುಕರಣೀಯ ಎನಿಸಿಕೊಳ್ಳುತ್ತಾನೋ ಅವರನ್ನು ನಿಜವಾದ ಸೆಲೆಬ್ರಿಟಿ ಎಂದು ಗುರುತಿಸಿ ಅನುಕರಣೀಯ ಎಂದು ಪರಿಗಣಿಸಬೇಕು ಮತ್ತು ಅದೇ ರೀತಿ ಸಿನಿಮಾ ಧಾರಾವಾಹಿಗಳಲ್ಲಿ ನಟಿಸಿ, ದೃಶ್ಯ ಮಾಧ್ಯಮದಲ್ಲಿ ಹೆಚ್ಚು ಕಾಣಿಸಿಕೊಂಡು ತಿಕ್ಕಲರಂತೆ ವರ್ತಿಸಿ, ರಾಜಕೀಯದಲ್ಲಿ ಅಧಿಕಾರ ಹಿಡಿದು, ಇನ್ನೇನೋ ಕಾರಣಕ್ಕೆ ಸಮಾಜ ದ್ರೋಹದ ಹೇಳಿಕೆ ನೀಡುವ ಹುಚ್ಚರನ್ನು ಅವರು ಎಷ್ಟೇ ಖ್ಯಾತರಾಗಿದ್ದರೂ ಅವರ ವ್ಯಕ್ತಿತ್ವ ಸರಿ ಇಲ್ಲದಿದ್ದರೆ ಅವರನ್ನು ಸಾಮಾನ್ಯ ಜನರಿಗಿಂತ ಕೆಳ ಮಟ್ಟದಲ್ಲಿಯೇ ಗುರುತಿಸಬೇಕು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ , ಸಮೂಹ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ಅನರ್ಹರು ಸೆಲೆಬ್ರಿಟಿ ಪಟ್ಟ ಪಡೆದು ಆಗಬಾರದ ಅನಾಹುತ ಅಗುವ ಸಾಧ್ಯತೆ ಇದೆ.
ಮತ್ತೆ ಮತ್ತೆ ಯೋಚಿಸಿ, ಪ್ರಶ್ನಿಸಿಕೊಳ್ಳಿ,
ಪ್ರಬುದ್ದತೆಯ ಗುಣಮಟ್ಟದ ಸಮಾಜ ನಮ್ಮದಾಗಲಿ ಎಂದು ಆಶಿಸುತ್ತಾ..
ಲೇಖಕರು : ವಿವೇಕಾನಂದ. ಹೆಚ್.ಕೆ